2009/08/23

ಸಂಯಮ

ಲಿಫ್ಟಿನಲ್ಲಿ ಬಂಧಿತ; ಜೊತೆಗೆ ಐವತ್ತರ ಆಸುಪಾಸಿನ ಆಸಾಮಿ
ಕಾಲು ಗಂಟೆಯೊಳಗೆ ಆಫೀಸಿನಲ್ಲಿ ಮೀಟಿಂಗಿಗೆ ಹೋಗದಿದ್ದರೆ
ಕೆಲಸ ಹೋಗುವುದಂತೂ ಖಂಡಿತ

ಬಾಗಿಲ ತೆಗೆಯಲು ನಾನು ಕಷ್ಟಪಡುತ್ತಿದ್ದರೆ
ಅವರು ಅಲ್ಲೇ ಕೊಳಕು ಲಿಫ್ಟಿನಲ್ಲಿ ಕುಳಿತರು
ಕಣ್ಣು ಕೆಂಪಾಗಿದೆ, ಧ್ವನಿ ಹಿಡಿತದಲ್ಲಿಲ್ಲ ... ಬೆಳಗ್ಗೆಯೇ ಎಣ್ಣೆಯೆ?
ಹಣೆಯಲ್ಲಿ ಕುಂಕುಮ ಬೇರೇ; ಹಿಪೋಕ್ರಿಟ್ಸ್!

ವಾಚ್ಮನ್ ಬಂದು ಯಾರಿಗೋ ಕರೆ ಮಾಡಿದ; ಸರಿಮಾಡಲು ಬರುವರಂತೆ.
ಇದ್ದ ಕೆಲಸವೂ ಹೋಯಿತಲ್ಲ ಎಂದು ತನುಮನಗಳಲ್ಲಿ ದುಃಖ-ಸಿಟ್ಟು
ಅವರೋ "ತಾಳ್ಮೆಯಿರಲಿ; ಚಿಂತಿಸಬೇಡ, ದೇವರಿದ್ದಾನೆ!" ಎನ್ನುತ್ತಿರುವರು
ಕುಡುಕರಿಗೇನು ಗೊತ್ತು ಸಮಯದ ಮಹತ್ವ

ಒಂದು ಗಂಟೆ ತರುವಾಯು ಬಿಡುಗಡೆ; "ಡ್ರಾಪ್ ಬೇಕಾ?" ಎಂದು ಕೇಳಿದೆ
ವಿನಾಯಕ ಆಸ್ಪತ್ರೆಯ ಬಳಿ ಇಳಿಯುವಾಗ ಹೇಳಿದರು:
ಪೂಜೆ ಮಾಡುವಾಗ ಕರೆ ಬಂದಿತ್ತಂತೆ, ಮಗನಿಗೆ ಆಕ್ಸಿಡೆಂಟ್ ಆಗಿದೆಯೆಂದು

2 comments:

Manju said...

"Prejudice is opinion without judgement."

ಸಂಕ್ಷಿಪ್ತ said...

ನಿಜ, ಆದರೆ prejudgement ಮನುಷ್ಯನ ಸಹಜಗುಣ ಅಲ್ಲವೆ? :)